ಒಂದೇ ಕೂಗಳತೆ ಭೂ ವೈಕುಂಠ


ಒಂದೇ ಕೂಗಳತೆ ಭೂ ವೈಕುಂಠ
ಸಂದೇಹವಿಲ್ಲವು ಸಾಧು ಸಜ್ಜನರಿಗೆ

ಅಂಬರೀಷನು ದ್ವಾದಶಿವ್ರತ ಮಾಡಲು
ಡೊಂಬೆಯ ಮಾಡಿದ ದುರ್ವಾಸನು
ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ
ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು

ಕರಿರಾಜ ವನದಲಿ ಉಳುಹೆಂದು ಕೂಗಲು
ತ್ವರಿತದಿಂದಲಿ ಬಂದು ಕಾಯ್ದ ತಾನು
ಕರುಣಸಾಗರ ಕೃಷ್ಣ ಕಾಯಬೇಕೆನುತಲೆ
ತರಳ ಪ್ರಹ್ಲಾದನ ಕಂಬದಿಂ ಬಂದುದು

ದ್ರುಪದರಾಯನ ಪುತ್ರಿಗಾಪತ್ತು ಬರಲು
ಕೃಪೆಯಿಂದಲಕ್ಷಯವಿತ್ತನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆದರ ಹೃದಯವೇ ವೈಕುಂಠ

No comments: