ಗೋವಿಂದ ನಮೋ ಗೋವಿಂದ ನಮೋ

ಗೋವಿಂದ ನಮೋ ಗೋವಿಂದ ನಮೋ
ಗೋವಿಂದ ನಾರಾಯಣ

ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ

ಮಂಚ ಬಾರದು ಮಡದಿ ಬಾರಳು
ಕಂಚುಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೊ ಧರ್ಮವ

ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತೃ ಯಮನವರೆಳೆದು ಒಯ್ದಾಗ
ಅರ್ಥಪುತ್ರರು ಕಾಯ್ವರೆ

ತಂದು ಬಂದರೆ ತನ್ನ ಪುರುಷನ
ಬಂದಿರಾ ಬಳಲಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ
ಹಂದಿನಾಯಂತೆ ಬೊಗಳ್ವಳು

ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣಹೋಗುವ ಸಮಯದಲ್ಲಿ
ಜಾಣೆ ಕರೆದರೆ ಬಾರಳು

ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದರು
ಕಂಟಕ ಯಮನವರು ಎಳೆವಾಗ
ನಂಟರಿಷ್ಟರು ಬಾರರು

ಒಡವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಗೆ

ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಟ್ಠಲೇಶನ ಚರಣವ

No comments: