ಇಷ್ಟು ಪಾಪಗಳ ಮಾಡಿದ್ದೆ ಸಾಕು


ಇಷ್ಟು ಪಾಪಗಳ ಮಾಡಿದ್ದೆ ಸಾಕು
ಸೃಷ್ಟೀಶನೆ ಎನ್ನನುದ್ಧರಿಸಬೇಕು

ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನು ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂಕರರಂತೆ ಹೊರೆದೆ ಹೊಟ್ಟೆ

ವ್ರತ ನೇಮ ಉಪವಾಸ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿ ಶಾಸ್ತ್ರ ಪೌರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ

ಶುದ್ಧ ವೈಷ್ಣವ ಕುಲದಲುದ್ಭವಿಸಿದೆ ನಾನು
ಮಧ್ವಮತ ಸಿದ್ದಾಂತ ಪದ್ದತಿಗಳ
ಬುದ್ಧಿಪೂರ್ವಕ ತಿಳಿಯದುದ್ದಂಡ ಕಾಯವನು
ವೃದ್ಧಿ ಮಾಡಿದೆನಯ್ಯ ಉದ್ಧರಿಸು ಹರಿಯೆ

ತಂದೆ ತಾಯ್ಗಳ ಸೇವೆಯೊಂದುದಿನ ಮಾಡಲಿಲ್ಲ
ಮಂದಭಾಗ್ಯಗೆ ಭವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ

No comments: