ಆರಿದ್ದರೇನಯ್ಯ ನೀನಿಲ್ಲದೆ


ಆರಿದ್ದರೇನಯ್ಯ ನೀನಿಲ್ಲದೆ
ಕಾರುಣ್ಯನಿಧಿ ಹರೆಯೆ ಕೈಯ ಬಿಡಬೇಡ


ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದರಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು


ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂದಿಯನು ಸೀಳಿ ಕೃಪೆಯಿಂದ ಸಲಹೆದೆಯೊ


ಅಜಮಿಳನು ಕುಲಗೆಡಲು ಕಾಲದೂತರು ಬಂದು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಟ್ಠಲ
ನಿಜದೂತರನು ಕಳುಹಿ ಕಾಯ್ದೆ ಶ್ರೀಹರೆಯೆ

No comments: