ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ


ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ

ಮುನ್ನಾದ ದುಃಖವು ನಿಜವಾಗಿ ತೊಲಗುವುದು

ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ
ತೀರದಲಿ ಕುಳಿತು ನೀ ಹಣೆಗೆ ನಿತ್ಯ
ನೀರಿನಲಿ ಮುಟ್ಟಿಯನು ಕಲೆಸಿ ಬರೆಯುತ ಮೂಗು
ಬೇರನ್ನು ಹಿಡಿದು ಮುಸುಗಿಕ್ಕಲೇನುಂಟು

ನೂರಾರು ಕರ್ಮಂಗಳನು ದಂಭಕೆ ಮಾಡಿ
ಆರಾರಿಗೋ ಹಲವು ದಾನಕೊಟ್ಟು
ದಾರಿದ್ರ್ಯವನು ಪಡೆದು ತಿರಿದುಂಬುವುದಕೀಗ
ದಾರಿಯಾಯಿತೆ ಹೊರತು ಬೇರೆ ಫಲವುಂಟೆ

ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ
ಮಾಡಿಕೊಂಡದರ ಪೂಜೆಯನು ಮಾಡೆ
ಕಾಡಕಳ್ಳರು ಬಂದು ಅವುಗಳನು ಕೊಂಡೊಯ್ಯೆ
ಮಾಡಿಕೊಂಡಿರ್ದುದಕೆ ಬಾಯ ಬಡುಕೊಳ್ಳುವೆಯೊ

ಮಗನ ಮದುವೆಯು ಎಂದು ಸಾಲವನು ನೀ ಮಾಡಿ
ಸುಗುಣಿಯೆನ್ನಿಸಿಕೊಳ್ಳಲು ವೆಚ್ಚ್ಹ ಮಾಡಿ
ಹಗರಣವ ಪಡಿಸಿದರೆ ಸಾಲಗಾರರು ಬಂದು
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ

ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು
ಥಟ್ಟನೆ ಶ್ರೀಹರಿಯ ಪಾದವನು ನಂಬು
ದಿಟ್ಟ ಶ್ರೀ ಪುರಂದರವಿಟ್ಠಲಯೆಂದೆನಲು
ಸುಟ್ಟುಹೋಗುವವಯ್ಯ ಕಷ್ಟರಾಶಿಗಳು

No comments: