
ಸಂತತ ಸುರರಿಗೆ ಪೀಯೂಷ ಉಣಿಸಿದ
ಪಂಕ್ತಿಯೊಳಗೆ ಪರವಂಚನೆ ಮಾಡಿದ
ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚಂದದಿ ಕಡೆದು ಅಮೃತವ ತೆಗೆದು
ಇಂದುಮುಖಿ ನೀ ಬಡಿಸೆಂದು ಕೊಟ್ಟರೆ
ದಂಧನಗಳ ಮಾಡಿ ದೈತ್ಯರ ವಂಚಿಸಿದ
ವಿಶ್ವಾಸದಿಂದಲಿ ಅಸುರಗೆ ವರವಿತ್ತು
ತ್ರಿಶೂಲಧರ ಓಡಿ ಬಳಲುತಿರೆ
ನಸುನಗುತಲಿ ಬಂದು ಭಸ್ಮಾಸುರಗೆ ಭೋಗ-
ದಾಸೆಯ ತೋರಿ ಭಸ್ಮವ ಮಾಡಿದ
ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ
ಬಸಿರಲಿ ಬ್ರಹ್ಮನ ಪಡೆದವಳಿವಳು
ಕುಸುಮನಾಭ ಶ್ರೀ ಪುರಂದರವಿಠಲನ
ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆ
No comments:
Post a Comment