ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ


ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ

ಮರಣವನೊಲ್ಲೆ ಜನನವನೊಲ್ಲೆ
ದುರಿತ ಸಂಸಾರ ಕೋಟಲೆಯ ನಾನೊಲ್ಲೆ
ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ
ಚರಣ ಕಮಲದ ಸ್ಮರಣೆಯೊಳಿರಿಸೆನ್ನ

ಬೆಂದೆ ಸಂಸಾರವೆಂಬೊ ಬೇನೆ ಮಧ್ಯದಲ್ಲಿ
ನೊಂದೆನೊ ನಾ ಬಹಳ ಕರೆಕರೆಯಲ್ಲಿ
ನಂದಗೋಪನ ಕಂದ ವೃಂದಾವನಪ್ರಿಯ
ಎಂದೆಂದೊ ನಿನ್ನ ಸ್ಮರಣೆಯೊಳಿರಿಸೆನ್ನ

ಪುತ್ರ ಮಿತ್ರ ಕಳತ್ರ ಬಂಧುಗಳೆಂಬ
ಕತ್ತಲೆಯೊಳು ಸಿಲುಕಿ ಕಡುನೊಂದೆನಲ್ಲ
ಮುಕ್ತಿದಾಯಕ ಉಡುಪಿಯ ಕೃಷ್ಣರಾಯ
ಭಕ್ತವತ್ಸಲ ಶ್ರೀ ಪುರಂದರವಿಠಲ

No comments: