ದಾರಿಯೇನಿದಕೆ ಮುರಾರಿ

ದಾರಿಯೇನಿದಕೆ ಮುರಾರಿ ನೀ
ಕರುಣದಿ ಕೈ ಹಿಡಿಯದಿದ್ದರೆ

ಕಷ್ಟ ಕರ್ಮಂಗಳು ಎಷ್ಟಾದರು ಮಾಳ್ಪೆ
ಇಷ್ಟೂ ಲಕ್ಷಿಪನಲ್ಲ ಗುರುಹಿರಿಯರ
ದುಷ್ಟರ ಸಂಗವ ಬಹಳ ಮಾಡಿದರಿಂದ
ಶ್ರೇಷ್ಠರ ಸೇವೆಯೆಂದರೆ ಆಗದೆನಗೆ

ಪರರ ದೂಷಣೆಮಾಡಿ ಪರರ ಪಾಪಂಗಳ
ಪರಿಪರಿಯಲಿ ಆಡಿಕೊಂಬೆ ನಾನು
ಹರಿನಾಮಾಮೃತವನು ಹೇಳಿ ಕೇಳದೆ ಹಾಳು
ಹರಟೆಯಿಂದ ಹೊತ್ತು ಕಳೆಯುವ ಎನಗೆ

ಪಾತಕ ಕರ್ಮಗಳ ಮಾಡಿದಜಾಮಿಳಗೆ
ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ
ನೂತನವೇಕಿನ್ನು ಸೂರ್ಯಾಂತರ್ಗತ ಜಗ
ಜ್ಯೋತಿಯಾದ ಶ್ರೀ ಪುರಂದರವಿಠಲ

No comments: