ಆಡಿದನೊ ರಂಗ ಅದ್ಭುತದಿಂದಲಿ

ಆಡಿದನೊ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ

ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯಮಾಡುತಲಿ ನಲಿ-
ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ

ಅಂಬುರುಹೋದ್ಭವ ಅಖಿಲ ಸುರರು ಕೂಡಿ
ಅಂಬರದಲಿ ನಿಂತವರು ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಣಿ ತೋಂ ಎಂದು

ಝಂಪೆತಾಳದಿ ತುಂಬುರನೊಪ್ಪಿಸೆ
ಧಾಮಪಪದಸರೀ ಎಂದು ಧ್ವನಿಯಿಂದ
ನಾರದ ತುಂಬುರರ್ಗಾನವ ಮಾಡಲು
ನಂದಿಯು ಚಂದದಿ ಮದ್ದಲೆ ಹಾಕಲು

ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು
ಘಣಘಣಿಸುತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ ಮುಖದೊಳು
ಚಲಿಸುವ ನೀಲಕೇಶಗಳಾಡೆ
ಕಾಲಲಂದಿಗೆ ಗೆಜ್ಜೆ ಘಲು ಘಲು
ಘಲುರೆನುತ ಉಡುಗೆಜ್ಜೆ ಘಂಟೆಗಳಾಡೆ

ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀಕೃಷ್ಣನು
ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು

ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು

ಚಿಕ್ಕವನಿವನಲ್ಲ ಪುರಂದರವಿಠಲ
ವೆಂಕಟರಮಣನ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ

No comments: