ಗುರುವಿನ ಗುಲಾಮನಾಗುವ ತನಕ

ಗುರುವಿನ ಗುಲಾಮನಾಗುವ ತನಕ
ದೊರಕದಣ್ಣ ಮುಕುತಿ



ಪರಿಪರಿಶಾಸ್ತ್ರವನೇಕವನೋದಿ
ವ್ಯರ್ಥವಾಯಿತು ಭಕುತಿ


ಆರು ಶಾಸ್ತ್ರವನೋದಿದರಿಲ್ಲ ಮೂ-
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ



ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ




ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದ ವರದ ಶ್ರೀ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವ ತನಕ

No comments: