ಶ್ರೀ ಪುರಂದರ ದಾಸರು - Shri Purandara dasaru


ಹರಿದಾಸರೇಣ್ಯರೆಂದು ಹೆಸರುವಾಸಿಯಾಗಿರುವ ಪುರಂದರದಾಸರ ಪೂರ್ವ ನಾಮ ಶ್ರೀನಿವಾಸನಾಯಕ. ಈತ ನವಕೋಟಿ ನಾರಾಯಣನೆನ್ನಿಸಿ ಅತ್ಯಂತ ಶ್ರೀಮಂತನಾಗಿದ್ದನು. ಈತನ ಹೆಂಡತಿಯ ಹೆಸರು ಸರಸ್ವತೀಬಾಯಿ.

ಶ್ರೀನಿವಾಸನಾಯಕರು ಆಗರ್ಭ ಶ್ರೀಮಂತರಾಗಿದ್ದರೂ ತುಂಬ ಜಿಪುಣರಾಗಿದ್ದರು. ಆತನ ಪತ್ನಿ ಸರಸ್ವತಿಬಾಯಿಯಾದರೋ ಪರಮ ದೈವಭಕ್ತಳು. ಶ್ರೀನಿವಾಸನಾಯಕರಿಗೆ ಜ್ನಾನೋದಯವನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಭಗವಂತನು ಬಡಬ್ರಾಹ್ಮಣನ ವೇಷವನ್ನು ಧರಿಸಿ ಒಬ್ಬ ಹುಡುಗನೊಂದಿಗೆ ಕೂಡಿ, ತನ್ನ ಮಗನಿಗೆ ಬ್ರಹ್ಮೋಪದೇಶವನ್ನು ಮಾಡಿಸುವ ಸಲುವಾಗಿ ಧನಸಹಾಯ ಮಾಡಬೇಕೆಂದು ಶ್ರೀನಿವಾಸನಾಯಕರಲ್ಲಿ ಬಂದು ಯಾಚಿಸಿದನು.

ಶ್ರೀನಿವಾಸನಾಯಕರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ, ಆ ಬ್ರಾಹ್ಮಣನನ್ನು ಹಲವಾರು ಬಾರಿ ಅಲೆದಾಡಿಸಿ ಕಡೆಗೆ ಒಂದು ಸವಕಲು ನಾಣ್ಯವನ್ನು ಕೊಟ್ಟರು. ಖಿನ್ನನಾದ ಬಡ ಬ್ರಾಹ್ಮಣನು ಸರಸ್ವತಿಬಾಯಿಯಲ್ಲಿಗೆ ಬಂದು ತನ್ನ ಮನೋಭಿಪ್ರಾಯವನ್ನು ತಿಳಿಸಿದನು. ಆಕೆಯ ಮನಸ್ಸು ಕರಗಿತು. ಮೊದಮೊದಲು ದಿಕ್ಕು ತೋಚದಂತಾಯಿತು. ಕಡೆಗೆ ತನ್ನ ತವರಿನವರು ತನಗೆ ಕೊಟ್ಟಿದ್ದ ಮುತ್ತಿನ ಮೂಗುತಿಯನ್ನು ಆ ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿದಳು. 

ವೇಶಧಾರಿಯಾದ ಆ ಬ್ರಾಹ್ಮಣನು ಆ ಒಡವೆಯನ್ನು ಅಡವಿಟ್ಟು ಹಣವನ್ನು ಪಡೆಯಲೆಂದು ಶ್ರೀನಿವಾಸರಲ್ಲಿಗೇ ಬಂದನು. ಕುಶಾಗ್ರಮತಿಯಾದ ಶ್ರೀನಿವಾಸನಾಯಕರು, ಆ ಒಡವೆ ಯಾರದಿರಬಹುದೆಂದು ಊಹಿಸಿ, ಒಡನೆಯೇ ಮನೆಗೆ ಬಂದು, ನಿಜವೃತ್ತಾಂತವನ್ನು ತಿಳಿದು, ಹೆಂಡತಿಯನ್ನು ದಂಡಿಸಿದರು.

ಆಕೆ ಅಸಹಾಯಕಳಾಗಿ ಪರಮಾತ್ಮನನ್ನು ಪ್ರಾರ್ಥಿಸಿದಳು. ಗಂಡನ ಆಗ್ರಹವನ್ನು ಎದುರಿಸಲಾಗದೆ, ತನ್ನ ಪ್ರಾಣವನ್ನೇ ತ್ಯಾಗಮಾಡಬೇಕೆಂದು ವಿಷವನ್ನು ಕುಡಿಯಲು ಬಟ್ಟಲನ್ನು ಮೇಲಕ್ಕೆ ಎತ್ತಿದಾಗ ಅದರಲ್ಲಿ ಆಕೆಯ ಮೂಗುತಿ ಬಿದ್ದಿದ್ದು ಗೋಚರಿಸಿತು. ಈ ಸೋಜಿಗವನ್ನು ಮನಗಂಡ ಶ್ರೀನಿವಾಸನಾಯಕರಿಗೆ ತಮ್ಮ ಅಜ್ಞಾನ ಸರಿದು, ಬಂದಾತ ಭಗವಂತನಿರಬೇಕೆಂದು ಧೃಡವಾಯಿತು. ಆ ಕ್ಷಣವೇ ತಮ್ಮ ಆಸ್ತಿ ಪಾಸ್ತಿಗಳೆನ್ನೆಲ್ಲ ಶ್ರಿಷ್ಣಾರ್ಪಣವೆಂದು ದೇವರಿಗೆ ಸಲ್ಲಿಸಿ ವಿರಕ್ತರಾದರು.

 "ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಿಗ್ಗಿ ಹಾಡುತ್ತಾ ತಮಗೆ ಜ್ಞಾನೋದಯವನ್ನು ಉಂಟು ಮಾಡಿದ ತಮ್ಮ ಹೆಂಡತಿಯನ್ನು ಮುಕ್ತ ಕಂಠದಿಂದ ಕೊಂಡಾಡಿದರು. ಅನಂತರ ಶ್ರೀವ್ಯಾಸರಾಯರಲ್ಲಿಗೆ ಹೋಗಿ "ಪುರಂದರ ವಿಠಲ" ಎಂಬ ಅಂಕಿತವನ್ನು ಪಡೆದು ತಮ್ಮ ಕೀರ್ತನ ಕೈಂಕರ್ಯವನ್ನು ಅತ್ಯಂತ ಉಜ್ವಲವಾಗಿ ನೆರವೇರಿದರು.

ಶ್ರೀಪುರಂದರದಾಸರು ಸಾಧಿಸಿದ ಮಹಾತ್ಕಾರವನ್ನು ಮೆಚ್ಹಿಕೊಂಡು ಶ್ರೀವ್ಯಾಸರಾಯರು ಅವರನ್ನು "ದಾಸರೆಂದರೆ ಪುರಂದರದಾಸರಯ್ಯ" ಎಂದು ಪ್ರಶಂಸಿಸಿದಷ್ಟೇ ಅಲ್ಲದೆ ಅವರ ರಚನೆಗಳನ್ನು "ಪುರಂದರೋಪನಿಷತ್ತು" ಎಂದು ಗೌರವಿಸಿರರು.

ಶ್ರೀ ಪುರಂದರದಾಸರು ೪,೭೫,೦೦೦ ಕೃತಿಗಳನ್ನು ರಚಿಸಿದರೆಂದು ತಿಳಿದು ಬರುತ್ತದೆ. ಈಗ ಉಪಲಬ್ಧವಾಗಿರುವ ಅವರ ಕೀರ್ತನೆಗಳ ಸಮುದಾಯವನ್ನು ಸಮೀಕ್ಷಿಸಿದರೆ ಅವರ ಪ್ರಾಸಾದಿಕವಾಣಿಯ ವೈಭವವು ಸ್ವವಿವಿದಿತವಾಗುತ್ತದೆ. ಅವರ ಕೃತಿಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಸ್ವಧರ್ಮ ನಿಷ್ಠೆಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಅವರನ್ನು 'ಕರ್ಣಾಟಕ ಸಂಗೀತ ಪಿತಾಮಹ' ಎಂದು ಎಲ್ಲರೂ ಮನ್ನಿಸುವುದುಂಟು. ಸಮಗ್ರ ಹರಿದಾಸ ಸಾಹಿತ್ಯ ಪ್ರಪಂಚದ ಪ್ರತಿನಿಧಿಯಂತಿರುವ ಪುರಂದರದಾಸರನ್ನು "ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ" ಎಂದು ಹೊಗಳುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪುರಂದರದಾಸರು ನಾರದರೆಂದು ಸುಪ್ರಸಿದ್ಧವಾಗಿರುವುದರಿಂದ ಅವರು ಭಕ್ತಿ ಸಂಪನ್ನರು, ಗಾನ ಲೋಲರು.

No comments: