ಸಂಸಾರವೆಂಬಂಥ ಭಾಗ್ಯವಿರಲಿ - Samsaravembantha bhagyavirali

ಸಂಸಾರವೆಂಬಂಥ ಭಾಗ್ಯವಿರಲಿ
ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ

ತಂದೆ ನೀನೆ ಕೃಷ್ಣ ತಾಯಿ ಇಂದಿರೆದೇವಿ
ಪೊಂದಿದ ಅಣ್ಣನು ವನಜಸಂಭವನು
ಇಂದುಮುಖಿ ಸರಸ್ವತೀದೇವಿಯೇ ಅತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು

ಭಾರತೀ ದೇವಿಯೇ ಗುರುಪತ್ನಿಯು ಎನಗೆ
ಗರುಡ ಶೇಷಾದಿಗಳೆ ಗುರುಪುತ್ರರು
ಹರಿದಾಸರೆಂಬುವರೆ ಇಷ್ಟ ಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು

ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ
ಹರಿಯ ನಾಮವೆ ಇನ್ನು ಅಮೃತಪಾನ
ವರದ ಪುರಂದರವಿಠಲ ನಿನ್ನ ಪಾದ ಧ್ಯಾನ
ಕರುಣಿಸಿ ಅನವರತ ಕರ ಪಿಡಿದು ಕಾಯೊ

No comments: