
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ
ವಾಕು ವಾಕಿಗೆ ಡೊಂಕನೆಣಿಸುವರು ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕುಶೂಲಗಳಿಂದ ನೆಡುವರು ಪರರನೀ
ಪೋಕುಮಾನವರಿಂದ ನೊಂದೆ ಹರಿಯೆ
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿವರು ಪರರ
ಭಾವಿಸಲರಿಯರು ಗುರುಹಿರಿಯರನಿಂಥ
ಹೇಯ ಮನುಜರಿಂದ ನೊಂದೆ ಹರಿಯೆ
ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ
ತೊತ್ತಿನೊಡನೆ ತನ್ನ ಸ್ನೇಹಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಠಿ ಸಟೆಯೆಂಬರು ಇಂಥ
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ
ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಪಡುವ ಕೈಮೇಲಾಗಿ
ಸೃಷ್ಠಿಗೊಡೆಯ ಶ್ರೀಪುರಂದರವಿಠಲನೆ
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ