ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕವೆಂದು ಸಾರಿರೈ
ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ ಜೀವಜಡ ಪರಮಾತ್ಮಗೆ
ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು
ಜಾನಪಿತರಜಾನಜ ಕರ್ಮರು ಉಕ್ತ ಶೇಷ ಶತಸ್ಥರು
ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣರು
ಇನಜಗೆ ಸಮ ಚಂದ್ರ ಸೂರ್ಯರು ಮನುಸತಿಯು ಹೆಚ್ಚು ಪ್ರವಹನು
ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು
ದೇವೇಂದ್ರನಿಂದಧಿಕ ಮಹರುದ್ರ ರುದ್ರ ಸಮ ಶೇಷಗರುಡರು
ಗರುಡಶೇಷರಿಗಧಿಕರೆನಿಪರು ದೇವಿ ಭಾರತಿ ಸರಸ್ವತಿ
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂ ಅಧಿಕಶಕ್ತಳು ಶ್ರೀರಮಾ
ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ
ಸಜ್ಜನರ ಸಂಗ ನಮಗೆಂದಿಗಾಗುವುದೊ
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ
ವಾಕು ವಾಕಿಗೆ ಡೊಂಕನೆಣಿಸುವರು ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕುಶೂಲಗಳಿಂದ ನೆಡುವರು ಪರರನೀ
ಪೋಕುಮಾನವರಿಂದ ನೊಂದೆ ಹರಿಯೆ
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿವರು ಪರರ
ಭಾವಿಸಲರಿಯರು ಗುರುಹಿರಿಯರನಿಂಥ
ಹೇಯ ಮನುಜರಿಂದ ನೊಂದೆ ಹರಿಯೆ
ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ
ತೊತ್ತಿನೊಡನೆ ತನ್ನ ಸ್ನೇಹಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಠಿ ಸಟೆಯೆಂಬರು ಇಂಥ
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ
ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಪಡುವ ಕೈಮೇಲಾಗಿ
ಸೃಷ್ಠಿಗೊಡೆಯ ಶ್ರೀಪುರಂದರವಿಠಲನೆ
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ
ಸಕಲವೆಲ್ಲವು ಹರಿಸೇವೆಯೆನ್ನಿ
ರುಕುಮಿಣಿಯರಸ ವಿಟ್ಠಲನಲ್ಲದಿಲ್ಲವೆನ್ನಿ
ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ದೇವರ ಯಾತ್ರೆಯೆನ್ನಿ
ಕೊಡುವ ದಾನವು ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ
ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ
ಎಸೆವ ಆಭರಣ ಯಶೋದೆನಂದನಗೆನ್ನಿ
ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ
ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ
ಊಟ ಸತ್ಕಾರ ಕಂಜನಾಭನಿಗೆನ್ನಿ
ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ
ಕೋಟಲೆ ಸಂಸಾರ ನಾಟಕಧರಗೆನ್ನಿ
ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರನಿಧಿ ಗಜವರದಗೆನ್ನಿ
ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ
ಶ್ರೀಮುದ್ರೆಗಳ ಧರಿಸಿ ಹರಿದಾಸನೆನ್ನಿ
ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಲಾಗದ ಅನಂತಮಹಿಮನೆನ್ನಿ
ಸೆಣಸುವ ರಕ್ಕಸರ ಶಿರವ ಚೆಂಡಾಡುವ
ಪ್ರಣವ ಗೋಚರ ಪುರಂದರವಿಠಲನೆನ್ನಿ