ಅನುದಿನದಲಿ ಬಂದು ತನುವ ಸ್ನೇಹವ ಮಾಡಿ


ಅನುದಿನದಲಿ ಬಂದು ತನುವ ಸ್ನೇಹವ ಮಾಡಿ
ಎನ್ನ ಬಿಟ್ಟು ಹೋಗುತೀಯಾ ಜೀವವೆ


ಬೆಲ್ಲದ ಹೇರಿನಂತೆ ಬೇಕಾದ ಬಂಧು ಬಳಗ
ನಿಲ್ಲೊ ಮಾತ ಹೇಳುತೇನೋ ಜೀವವೆ
ನಿಲ್ಲಲೀಸದೆ ನಿನ್ನ ಯಮನವರೆಳೆದೊಯ್ವಾಗ
ಬೆಲ್ಲ ಬೇವಾಯಿತಲ್ಲೋ ಕಾಯವೆ


ಸಕ್ಕರೆ ಪಾಯಸ ಸವಿದುಂಬ ಕಾಲದಲ್ಲಿ
ದಿಕ್ಕುಗೆಟ್ಟು ಹೋಗುತಿಯಾ ಜೀವವೇ
ದಕ್ಕಗೊಡದೆ ಎನ್ನ ಯಮನವರೆಳೆದೊಯ್ವಾಗ
ಸಕ್ಕರೆ ವಿಷವಾಯಿತಲ್ಲೋ ಕಾಯವೆ


ಸೋರುವ ಮನೆಯಲಿ ಧ್ಯಾನ ಮೌನಾದಿಗಳು
ಬೇರಿತ್ತು ನಿನ್ನ ಮನಸು ಜೀವವೇ
ನೀರಮೇಲಣ ಗುಳ್ಳೆ ತೋರಿ ಹಾರಿದಂತೆ
ಯಾರಿಗೆ ಯಾರಿಲ್ಲ ಕಾಯವೆ


ಅಂದಣದೈಶ್ವರ್ಯ ದಂಡಿಗೆ ಪಲ್ಲಕ್ಕಿ
ಮಂದಗಮನೆಯರು ಜೀವವೆ
ಮಂದಗಮನೆ ಯಾರೊ ಮಡದಿ ಮಕ್ಕಳು ಯಾರೊ
ಬಂದಂತೆ ಹೋಗುತೇನೋ ಕಾಯವೆ


ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು
ಇಟ್ಟದ್ದು ಈ ಊರು ಎತ್ತಿದ್ದು ಕಾಡೂರು
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ಮುಟ್ಟಿ ಭಜಿಸು ಕಂಡ್ಯ ಕಾಯವೆ

2 comments:

VidyaShankar Harapanahalli said...

Excellent work Vinod! Keep it up. - Vidyashankar, France

Unknown said...

ಜೈ ಜೈ ರಾಮ ಕೃಷ್ಣ ಹರಿ