ಗುಣವಾಯಿತೆನ್ನ ಭವರೋಗ


ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯನು ದೊರಕಿದನು
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವವೆಲ್ಲ

ಸಂತತ ಹರಿಭಕ್ತಿಯನುಪಾನ
ಸಂತತ ಗುರುಭಕ್ತಿ ಮರುಪಾನ
ಸಂತತ ಶ್ರವಣ ಕಠಿಣ ಪಥ್ಯ
ಸಂತತ ಕೀರ್ತನ ಉಷ್ಣೋದಕ

ಚಂದ್ರೋದಯ ಉಂಟು ಈತನಲಿ
ಚಿಂತಾಮಣಿಯುಂಟು ಈತನಲಿ
ಸಂಚಿಯೊಳಗೆ ತುಂಬ ಮಾತ್ರೆಗಳುಂಟು
ಚಿನ್ನಾಗಿ ಗುಣಮಾಡುವನೀತ

ಗುರುಸ್ಮರಣೆಯು ಶುಂಠಿ ಮೆಣಸು
ಹರಿದಿವ್ಯನಾಮವು ಸಾರನ್ನ
ಗುರುಪಾದಸೇವೆಯು ಸಿಹಿ ಸಾರು
ಹರಿಪಾದೋದಕವೇ ಘೃತವು

ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
ಹರಿಸರ್ವೋತ್ತಮನೆಂಬ ವೈದ್ಯ
ಪುರಂದರವಿಠಲನೆ ನಿಜವೈದ್ಯ

No comments: